ಬಿಗ್ ಬ್ರೇಕಿಂಗ್: ಸಚಿವ ಆನಂದ್ ಸಿಂಗ್ ರಾಜೀನಾಮೆ ಗುಲ್ಲಿನ ಬೆನ್ನಲ್ಲೇ ಮತ್ತಷ್ಟು ಬಿಜೆಪಿ‌ ಶಾಸಕರ ರಾಜೀನಾಮೆ? ಹೈರಾಣಾದ ಸಿಎಂ ಬೊಮ್ಮಾಯಿ

in Kannada News/News 202 views

ರಾಜ್ಯ ಬಿಜೆಪಿಗೆ ಸದ್ಯ ತಲೆನೋವಾಗಿ ಪರಿಣಮಿಸಿರುವ ಅತೃಪ್ತ ಸಚಿವ ಆನಂದ ಸಿಂಗ್, ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಆನಂದಕ್ಕೇ ಕುತ್ತು ತಂದಿದ್ದಾರೆ. ಮಾತ್ರವಲ್ಲ, ಆನಂದ ಸಿಂಗ್ ರಾಜೀನಾಮೆ ಗುಲ್ಲಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ಒಂದು ರೀತಿಯಲ್ಲಿ ಕಾವೇರಿದ ವಾತವಾರಣ ಸೃಷ್ಟಿಯಾಗಿದೆ.

Advertisement

ಸದ್ಯದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧಗಂಟೆ ಕಾಲ ಚರ್ಚಿಸಿ ಕೆಲವು ನಿಮಿಷಗಳ ಮೊದಲು ಅಲ್ಲಿಂದ ತೆರಳಿರುವ ಸಿಎಂ, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

ಆನಂದ ಸಿಂಗ್ ಮಾತ್ರವಲ್ಲದೆ ಅಸಮಾಧಾನಿತ ಶಾಸಕರಾದ ಎಂಟಿಬಿ ನಾಗರಾಜ್​, ಸಿ.ಪಿ. ಯೋಗೀಶ್ವರ್, ಪ್ರೀತಂ ಗೌಡ ಮುಂತಾದವರ ಕುರಿತು ಚರ್ಚೆ ನಡೆದಿದ್ದು, ಮುಂದೇನು ಮಾಡಬೇಕು ಎಂಬ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ. ಅಸಮಾಧಾನಿತ ಶಾಸಕರ ಮನವೊಲಿಸುವ ತಂತ್ರಗಾರಿಕೆಯಲ್ಲಿ ಯಡಿಯೂರಪ್ಪ ಚಾಣಾಕ್ಷರಾಗಿರುವ ಕಾರಣಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಸದ್ಯ ರೆಬೆಲ್​ ಆಗಿರುವ ಶಾಸಕರ ಜತೆಗೆ ಮತ್ತಷ್ಟು ಶಾಸಕರು ಸೇರಿದರೆ ಸರ್ಕಾರಕ್ಕೆ ಆಪತ್ತು ಖಚಿತ ಎಂಬುದನ್ನು ಅರಿತ ಸಿಎಂ, ಈಗಾಗಲೇ ಆ ಎಲ್ಲ ಬೆಳವಣಿಗೆಗಳನ್ನು ಶಮನಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂಬದು ತಿಳಿದು ಬಂದಿದೆ.

ಮುಚ್ಚಿದ ಲಕೋಟೆಯಲ್ಲಿ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಕಳಿಸಿದ ಆನಂದ್ ಸಿಂಗ್?

ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ ಇದೀಗ ಅಸಮಾಧಾನ ಭುಗಿಲೆದಿದ್ದು, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ರಾಜೀನಾಮೆ ಸುದ್ದಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಹೌದು…ತಾವು ಕೇಳಿದ್ದ ಖಾತೆ ನೀಡಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನ ಹೊರಹಾಕಿದ್ದ ಸಚಿವ ಆನಂದ್​​ ಸಿಂಗ್ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೇವಲ ಸಚಿವ ಸ್ಥಾನಕ್ಕೆ ರಾಜೀನಾಮೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂದು ಆವರ ಆಪ್ತ ಮೂಲಗಳು ತಿಳಿಸಿವೆ.

ಇದಕ್ಕೆ ಪುಷ್ಠಿ ನೀಡುವಂತೆ ಆನಂದ್ ಸಿಂಗ್ ಇದುವರೆಗೂ ವಿಧಾನಸಭೆಗೆ ಕಾಲಿಟ್ಟಿಲ್ಲ. ಅಲ್ಲದೇ ವಿಜಯನಗರ ಶಾಸಕರ ಕಚೇರಿಯನ್ನು ಸಹ ಆನಂದ್ ಸಿಂಗ್ ಖಾಲಿ ಮಾಡಿದ್ದು, ಇಲ್ಲಿ ಶಾಸಕರು ಲಭ್ಯವಿಲ್ಲ ಎಂದು ಬೋರ್ಡ್‌ ಸಹ ಹಾಕಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಸಿಎಂಗೆ ರಾಜೀನಾಮೆ ಪತ್ರ?
ಮೊನ್ನೇ ಕುಟುಂಬ ಸಮೇತರಾಗಿ ಬಂದು ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದರು. ಸದ್ಯಕ್ಕೆ ಆಗೋಲ್ಲ. ಈ ಖಾತೆಯನ್ನೇ ನಿಭಾಯಿಸಿ. ಮುಂದೆ ನೋಡೋಣ. ಈಗ ನಿಮ್ಮ ಖಾತೆ ಬದಲಿಸಿದ್ರೆ ಇನ್ನುಳಿದವರೂ ಸಹ ತಮ್ಮ ಖಾತೆ ಬದಲಾವಣೆ ಮಾಡುವಂತೆ ಬರುತ್ತಾರೆ. ಹಾಗಾಗಿ ಈಗ ಖಾತೆ ಬದಲಾವಣೆ ಸಾಧ್ಯವಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. ಸಿಎಂ ಮಾತಿನಿಂದ ಬೇಸರಗೊಂಡ ಆನಂದ್ ಸಿಂಗ್ ಕವರ್‌ನಲ್ಲಿ ರಾಜೀನಾಮೆ ಪತ್ರ ನೀಡಿ ಬಂದಿದ್ದಾರೆ ಎನ್ನಲಾಗಿದೆ.

ಈ ಹಿಂದೆಯೇ ರಾಜೀನಾಮೆ ಸುಳಿವು
ಯೆಸ್..ಖಾತೆ ಹಂಚಿಕೆ ಮಾಡಿದ ದಿನವೇ ಪ್ರವಾಸೋದ್ಯಮ ಆನಂದ್ ಸಿಂಗ್ ರಾಜೀನಾಮೆ ಸುಳಿವು ನೀಡಿದ್ದರು. ಬಳ್ಳಾರಿಯಲ್ಲಿ ಖಾತೆ ಹಂಚಿಕೆ ಬಗ್ಗೆ ಮಾತನಾಡುವ ವೇಳೆ ಅವರು, ಪ್ರವಾಸೋದ್ಯಮ ನನಗೆ ಬೇಡ. ಬೇರೆ ಖಾತೆ ಕೊಡಿ. ಇಲ್ಲ ಅಂದ್ರೆ ಶಾಸಕನಾಗಿಯೇ ಉಳಿಯುತ್ತೇನೆ ಎಂದು ಪರೋಕ್ಷವಾಗಿ ಸಚಿವ ಸ್ಥಾನವೂ ಬೇಡ ಎಂದಿದ್ದರು.

ಕಚೇರಿಯ ಬೋರ್ಡ್ ತೆರವು

ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಇದೀಗ ಅಸಮಾಧಾನದಿಂದ ತಮ್ಮ ಶಾಸಕರ ಕಚೇರಿಯ ಬೋರ್ಡ್ ತೆರವುಗೊಳಿಸುತ್ತಿದ್ದಾರೆ.

ಪ್ರವಾಸೋದ್ಯಮ ಖಾತೆ ನೀಡಿದ ಹಿನ್ನೆಲೆ ಆನಂದ್ ಸಿಂಗ್ ಅಸಮಾಧಾನಗೊಂಡಿದ್ದು, ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆಯನ್ನೂ ನಡೆಸಿದ್ದರು. ಆದರೆ ಈ ವೇಳೆ ಸಿಎಂ ಎರಡು ದಿನ ಸಮಯ ಕೇಳಿದ್ದರು ಎನ್ನಲಾಗಿದೆ. ಇದೀಗ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆ ಕಳೆದ 14 ವರ್ಷದಿಂದ ಹೊಸಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಕಚೇರಿಯನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

ಹೊಸಪೇಟೆ ಶಾಸಕರ ಕಚೇರಿ ಬೋರ್ಡ್ ತೆರವುಗೊಳಿಸುತ್ತಿದ್ದು, ಸಂಪೂರ್ಣ ಕಚೇರಿ ಬಂದ್ ಮಾಡಲು ಆನಂದ್ ಸಿಂಗ್ ಮುಂದಾಗಿದ್ದಾರೆ. ಕ್ರೇನ್ ಮೂಲಕ ಕಚೇರಿಯನ್ನು ತೆರವುಗೊಳಿಸುತ್ತಿದ್ದಾರೆ. ಈ ಹಿಂದೆಯೂ ಸಮ್ಮಿಶ್ರ ಸರ್ಕಾರದಲ್ಲಿ ಮುನಿಸಿಕೊಂಡು ಆನಂದ ಸಿಂಗ್ ರಾಜೀನಾಮೆ ನೀಡಿದ್ದರು. ಇದೀಗ ಆನಂದ್ ಸಿಂಗ್ ನಡೆಯಿಂದ ಬಿಜೆಪಿಯಲ್ಲಿ ಅತಂಕ ಜೊತೆ ಭಿನ್ನಮತೀಯ ಚಟುವಟಿಕೆ ಜೋರಾಗುವ ಸುಳಿವು ಸಿಕ್ಕಿದೆ.

ಭಾನುವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಆನಂದ್ ಸಿಂಗ್ ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡಿದ್ದರು. ಆದ್ರೆ ಭೇಟಿ ವೇಳೆ ಆನಂದ್ ಸಿಂಗ್ ಮನವೊಲಿಸಲು ಸಿಎಂ ವಿಫಲರಾಗಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಭೇಟಿಯ ಬಳಿಕ ಆನಂದ್ ಸಿಂಗ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹಿಂದಿರುಗಿದ್ದರು. ಆನಂದ್ ಸಿಂಗ್ ಬೆನ್ನಲ್ಲೇ ಮತ್ತೋರ್ವ ಅಸಮಧಾನಿತ ಸಚಿವ ಎಂಟಿಬಿ ನಾಗರಾಜ್ ಸಹ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿ, ಎರಡ್ಮೂರು ದಿನಗಳಲ್ಲಿ ತಮ್ಮ ನಿರ್ಧಾರ ತಿಳಿಸುವದಾಗಿ ಹೇಳಿ ಖಾತೆ ಹಂಚಿಕೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.

Advertisement
Share this on...