“ಅಂಬಾರಿಯಲ್ಲಿ ಚಾಮುಂಡಿಯನ್ನ ಕೂರಿಸೋಕೆ ಬಿಡಲ್ಲ, ಮಹಿಷನನ್ನ ಕೂರಿಸಬೇಕು.. ರಿಟ್ ಅರ್ಜಿ‌ಹಾಕ್ತೀನಿ”

in Kannada News/News 1,167 views

ಚಾಮುಂಡೇಶ್ವರಿ ಮಿಥ್ಯ, ಮಹಿಷಾಸುರ ಸತ್ಯ. ಯಾರೇ ಅಡ್ಡಿ ಬಂದರೂ ನಾವು ಮಹಿಷಾ ದಸರಾ ಮಾಡುತ್ತೇವೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಹೇಳಿದ್ದಾರೆ.

Advertisement

ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇದ್ದಾಗ, ವಿ.ಶ್ರೀನಿವಾಸ್ ಪ್ರಸಾದ್ ಸಚಿವರಾಗಿದ್ದಾಗ ಮಹಿಷಾ ದಸರಾ ಆಚರಣೆ ಮಾಡಲು ಅನುಮತಿ ನೀಡಲಾಗಿತ್ತು. ಆದರೆ ಸಂಸದ ಪ್ರತಾಪ್‌ ಸಿಂಹ ಮಹಿಷಾ ದಸರಾ ಆಚರಣೆ ಅಡ್ಡಿ ಪಡಿಸುತ್ತಿದ್ದಾರೆ. ಈತ ಪುಂಡ. ಇಂತಹ ಸಾವಿರ ದೊಣ್ಣೆ ನಾಯಕರು ಬಂದರೂ ನಾವು ಮಹಿಷಾ ದಸರಾ ಮಾಡುತ್ತೇವೆ ಎಂದರು.

ಚಾಮುಂಡೇಶ್ವರಿ ಮಿಥ್ಯ, ಮಹಿಷಾಸುರ ಸತ್ಯ. ಆದರೆ, ವೈದಿಕ ಧರ್ಮದ ಮನುವಾದಿಗಳು ಮಹಿಷಾಸುರನನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ. ಈ ಸತ್ಯವನ್ನು ಎಲ್ಲರೂ ಅರಿಯಬೇಕಿದೆ. ದಸರಾಗೆ ನಾವು ಹೇಗೆ ತೊಂದರೆ ಕೊಡುವುದಿಲ್ಲವೋ, ಅದೇ ರೀತಿ ಮಹಿಷಾ ದಸರಾ ಆಚರಣೆ ಮಾಡಲು ಜಿಲ್ಲಾಡಳಿತ ಅನುಮತಿ ಕೊಡಬೇಕು ಎಂದು ಒತ್ತಾಯಿಸಿದರು.

ಜಂಬೂ ಸವಾರಿಯಲ್ಲಿ ಚಾಮುಂಡಿ ಕೂರಿಸೋಕೆ ಬಿಡಲ್ಲ

ನಾಡಹಬ್ಬದ ಹೆಸರಿನಲ್ಲಿ ಜಂಬೂ ಸವಾರಿ ವೇಳೆ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಕೂರಿಸುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಈ ಸಂಬಂಧ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ತಿಳಿಸಿದ್ದಾರೆ.

ಮಹಿಷ ದಸರಾ ಆಚರಣಾ ಸಮಿತಿಯ ವತಿಯಿಂದ ನಗರದ ಅಶೋಕಪುಂನಲ್ಲಿರುವ ಅಂಬೇಡ್ಕರ್ ಉದ್ಯಾನವನದಲ್ಲಿ ಮಂಗಳವಾರ ನಡೆದ ಮಹಿಷ ಮೆರವಣಿಗೆಯಲ್ಲಿ ಭಾಗವಹಿಸಿದ ಬಳಿಕ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಸಮಸ್ತ ಭಾರತದ ಪ್ರತಿನಿಧಿಯಲ್ಲ. ಬಹುಸಂಸ್ಕೃತಿಯ ಪ್ರತಿನಿಧಿಯೂ ಅಲ್ಲ, ಈಕೆ ಏಕ ಸಂಸ್ಕೃತಿಯ ಪ್ರತಿನಿಧಿ. ಹಾಗಾಗಿ ನಾಡಹಬ್ಬದಲ್ಲಿ ಚಾಮುಂಡೇಶ್ವರಿ ಮೆರವಣಿಗೆ ಸರಿಯಲ್ಲ. ಈ ಸಂಬಂಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮುಂದಿನ ದಸರಾದಲ್ಲಿ ಚಾಮುಂಡೇಶ್ವರಿ ಪ್ರತಿಷ್ಠಾಪನೆಯನ್ನು ನಿಲ್ಲಿಸಲು ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದರು.

ಈ ದೇಶದ ಸ್ವಾತಂತ್ರ್ಯಕ್ಕೆ ಸೇವೆ ಸಲ್ಲಿಸಿದ, ಗಾಂಧಿ, ಅಂಬೇಡ್ಕರ್, ಬೌದ್ಧ ಧಮ್ಮ ಪ್ರಚಾರ ಮಾಡಿದ ಮಹಿಷನ ಫೊಟೊ ಇಟ್ಟು ಮೆರವಣಿಗೆ ಮಾಡಲಿ, ಇಲ್ಲ ನಾಲ್ವಡಿಕೃಷ್ಣರಾಜ ಒಡೆಯರ್ ಫೊಟೊವನ್ನು ಇರಿಸಲಿ. ಸಾರ್ವಜನಿಕ ಹಣವನ್ನು ಬಳಸಿಕೊಂಡು ಬಹುಸಂಸ್ಕೃತಿಗೆ ವಿರುದ್ಧ ಇದ್ದವರನ್ನು ವೈಭವೀಕರಿಸುವುದು ಅಪಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜ್ಞಾನಪ್ರಕಾಶ್ ಸ್ವಾಮೀಜಿ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್, ಲೇಖಕ ಸಿದ್ದಸ್ವಾಮಿ, ದಲಿತ ಸಂಘರ್ಷ ಸಮಿತಿಯ ಬೆಟ್ಟಯ್ಯ ಕೋಟೆ, ಚೋರನಹಳ್ಳಿ ಶಿವಣ್ಣ, ಆಲಗೂಡು ಶಿವಕುಮಾರ್, ಜನಸಂಗ್ರಾಮ ಪರಿಷತ್‌ನ ನಗರ್ಲೆ ವಿಜಯಕುಮಾರ್, ಸಾಹಿತಿ ಕೃಷ್ಣಮೂರ್ತಿ ಚಮರಂ, ಅಶೋಕಪುರಂ ರೇವಣ್ಣ, ಎಡದೊರೆ ಮಹದೇವಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement
Share this on...