ಚುನಾವಣೆಗೂ ಮುನ್ನವೇ ತಾವೇ ಸಮೀಕ್ಷೆ ಮಾಡಿ ಜನರಿಂದ ಉತ್ತರ ಪಡೆಯಲು ಮುಂದಾದ ಪ್ರಧಾನಿ ಮೋದಿ: ದೇಶದ ಜನತೆಗೆ ಅವರು ಕೇಳಿದ ಪ್ರಶ್ನೆಗಳೇನು ಗೊತ್ತಾ?

in Kannada News/News 109 views

ಉತ್ತರಪ್ರದೇಶ, ಗೋವಾ, ಉತ್ತರಾಖಂಡ, ಪಂಜಾಬ್ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗೂ ಮುನ್ನ, ಮತದಾರರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಜನರಿಂದ ನೇರವಾಗಿ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ.

Advertisement

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಮೋ ಆ್ಯಪ್ನಲ್ಲಿ ಷೇರ್ ಯುವರ್ ಒಪೀನಿಯನ್ (ನಿಮ್ಮ ಅಭಿಪ್ರಾಯ ತಿಳಿಸಿ) ಎಂಬ ಆನ್ಲೈನ್ ಸಮೀಕ್ಷೆಗೆ ಚಾಲನೆ ನೀಡಿದ್ದಾರೆ.
ಇದರಲ್ಲಿ ಮುಖ್ಯವಾಗಿ ಮತದಾರರಿಗೆ, ಚುನಾವಣೆ ವೇಳೆ ನಿಮಗೆ ಕೋವಿಡ್-19 ನಿರ್ವಹಣೆ, ರಾಮಮಂದಿರ ಅಥವಾ ಸಂವಿಧಾನದ 370ನೇ ವಿಧಿ ರದ್ದು ಈ ವಿಷಯಗಳ ಪೈಕಿ ಯಾವುದು ಮಹತ್ವದ್ದಾಗುತ್ತದೆ ಎಂದು ಪ್ರಶ್ನಿಸಲಾಗಿದೆ.
ಇನ್ನೊಂದು ಪ್ರಶ್ನೆಯಲ್ಲಿ, ನಿಮ್ಮ ಕ್ಷೇತ್ರದಲ್ಲಿ ವಿಪಕ್ಷಗಳು ಒಗ್ಗಟ್ಟಾದರೆ ಅದು ಪರಿಣಾಮ ಬೀರಲಿದೆಯೇ ಎಂದು ಪ್ರಶ್ನಿಸಲಾಗಿದೆ. ಬಿಜೆಪಿ ವಿರುದ್ಧ ದೊಡ್ಡ ಮಟ್ಟದಲ್ಲಿ ಮೈತ್ರಿಕೂಟ ಕಟ್ಟಲು ವಿಪಕ್ಷಗಳು ಯತ್ನ ನಡೆಸುತ್ತಿರುವ ಹೊತ್ತಿನಲ್ಲಿಯೇ ಇಂಥ ಪ್ರಶ್ನೆ ಕೇಳಿರುವುದು ಕುತೂಹಲ ಮೂಡಿಸಿದೆ.

ಇನ್ನೊಂದು ಪ್ರಶ್ನೆಯಲ್ಲಿ ಮತಚಲಾವಣೆ ವೇಳೆ ‘ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಅಥವಾ ರಾಜ್ಯದ ವಿಷಯಗಳು ಅಥವಾ ಸ್ಥಳೀಯ ಸಮಸ್ಯೆಗಳು ಪೈಕಿ ಯಾವುದು ಪ್ರಮುಖವಾಗುತ್ತವೆ ಎಂದು ಕೇಳಲಾಗಿದೆ. ಇನ್ನು ಕೆಲವು ಪ್ರಶ್ನೆಗಳನ್ನು ಗಮನಿಸಿದಾಗ ಅವು, ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಪರಿಣಾಮ ಬೀರುವ ಸುಳಿವನ್ನು ನೀಡಿವೆ. ಆ್ಯಪ್ನಲ್ಲಿ ಜನರು ತಮ್ಮ ಕ್ಷೇತ್ರ ಹಾಗೂ ರಾಜ್ಯದ ಹೆಸರನ್ನು ನಮೂದಿಸುವುದು ಕಡ್ಡಾಯ.

13 ವಿಷಯಗಳ ಪಟ್ಟಿ:

ಇನ್ನು ಈ ಪೈಕಿ ಯಾವ ವಿಷಯಗಳು ನಿಮಗೆ ಅತ್ಯಂತ ಮಹತ್ವದ್ದು ಎಂದು 13 ವಿಷಯಗಳನ್ನು ಪಟ್ಟಿಮಾಡಲಾಗಿದೆ. ಅದರಲ್ಲಿ ಎಷ್ಟುಅಂಶಗಳನ್ನು ಬೇಕಾದರೂ ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. ಹೀಗೆ ನೀಡಲಾದ ವಿಷಯಗಳ ಪಟ್ಟಿಯಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಕಾನೂನು ಮತ್ತು ಸುವ್ಯವಸ್ಥೆ, ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಖ್ ಕಾನೂನು, ಸಂವಿಧಾನದ 370ನೇ ವಿಧಿ ರದ್ದು, ಶಿಕ್ಷಣ, ಕೋವಿಡ್ ಅನ್ನು ಸರ್ಕಾರ ನಿರ್ವಹಿಸಿದ ರೀತಿ, ಉದ್ಯೋಗ, ಸ್ವಚ್ಛತೆ, ವಿದ್ಯುತ್, ರಸ್ತೆ ಮತ್ತು ಮೂಲಸೌಕರ್ಯದ ವಿಷಯಗಳಿವೆ.

ಆಯ್ಕೆಗಳು:

ಪ್ರಶ್ನೆಗಳ ಇನ್ನೊಂದು ಗುಚ್ಛದಲ್ಲಿ ಸಮೀಕ್ಷೆಗೆ ಒಳಪಡುವವರಿಗೆ, ಒಪ್ಪುವ ಅಥವಾ ತಿರಸ್ಕರಿಸುವ 2 ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿರುವುದು ಅಭಿವೃದ್ಧಿಗೆ ಒತ್ತು ನೀಡುತ್ತದೆಯೇ? ಕಳೆದ 4 ವರ್ಷದಲ್ಲಿ ರಾಜ್ಯ ಸರ್ಕಾರಗಳ ಕಾರ್ಯ ನಿರ್ವಹಣೆಯಲ್ಲಿ ಸುಧಾರಣೆ ಕಂಡುಬಂದಿದೆಯೇ? ಮುಂದಿನ ದಿನಗಳಲ್ಲಿ ನಿಮ್ಮ ರಾಜ್ಯದ ಭವಿಷ್ಯ ಇನ್ನಷ್ಟುಚೆನ್ನಾಗಿರಲಿದೆ ಎಂಬ ಆಶಾಭಾವ ಇದೆಯೇ? ನಿಮ್ಮ ರಾಜ್ಯ ಸರ್ಕಾರದ ಒಟ್ಟಾರೆ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.

ಮೋದಿ ಕೇಳಿರುವ ಪ್ರಮುಖ ಪ್ರಶ್ನೆಗಳು

– ಕೋವಿಡ್ ನಿರ್ವಹಣೆ, ರಾಮಮಂದಿರ, ಸಂವಿಧಾನದ 370ನೇ ವಿಧಿ ರದ್ದು: ಇದರಲ್ಲಿ ಯಾವದು ಮಹತ್ವದ್ದು?

– ನಿಮ್ಮ ಕ್ಷೇತ್ರದಲ್ಲಿ ವಿಪಕ್ಷಗಳು ಒಗ್ಗಟ್ಟಾದರೆ ಅದು ಪರಿಣಾಮ ಬೀರಲಿದೆಯೇ?

– ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿರುವುದು ಅಭಿವೃದ್ಧಿಗೆ ಒತ್ತು ನೀಡುತ್ತದೆಯೇ?

– 4 ವರ್ಷದಲ್ಲಿ ರಾಜ್ಯ ಸರ್ಕಾರಗಳ ಕಾರ್ಯ ನಿರ್ವಹಣೆಯಲ್ಲಿ ಸುಧಾರಣೆ ಕಂಡುಬಂದಿದೆಯೇ?

– ಮುಂದಿನ ದಿನಗಳಲ್ಲಿ ನಿಮ್ಮ ರಾಜ್ಯದ ಭವಿಷ್ಯ ಇನ್ನಷ್ಟುಚೆನ್ನಾಗಿರಲಿದೆ ಎಂಬ ಆಶಾಭಾವ ಇದೆಯೇ?

– ಗುಚ್ಛದಲ್ಲಿ ನಿಮ್ಮ ರಾಜ್ಯದಲ್ಲಿನ ಮೂವರು ಜನಪ್ರಿಯ ಬಿಜೆಪಿ ನಾಯಕರ ಹೆಸರನ್ನು ಸೂಚಿಸಿ

Advertisement
Share this on...