ರಿಸರ್ವೇಶನ್ (ಮೀಸಲಾತಿ) ಧಿಕ್ಕರಿಸಿ IIM ಪ್ರೊಫೆಸರ್ ಆದ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಯುವಕ

in Uncategorized 4,895 views

ಕೇರಳ ಮೂಲದ ರಂಜಿತ್ ರಾಮಚಂದ್ರನ್ IIM ರಾಂಚಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಆಯ್ಕೆಯಾಗಿದ್ದಾರೆ. 28 ವರ್ಷದ ರಾಮಚಂದ್ರನ್‌ ಈ ಹುದ್ದೆಗೆ ಏರುವ ಮುನ್ನ ನೈಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು‌. ಅವರು ದೊಡ್ಡ ಸಂಘರ್ಷದ ಜೀವನವನ್ನ ಸವೆಸಿ ಈ ಮಟ್ಟಕ್ಕೆ ತಲುಪಿದ್ದಾರೆ. ಶನಿವಾರ ಅವರು ಕೇರಳದಲ್ಲಿರುವ ತಮ್ಮ ಮನೆಯ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. “IIM ನ ಪ್ರೊಫೆಸರ್ ಈ ಮನೆಯಲ್ಲಿ ಜನಿಸಿದ್ದಾರೆ” ಎಂದು ಅವರು ಬರೆದಿದ್ದಾರೆ. ಅವರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ಈ ಪೋಸ್ಟ್ ಅನ್ನು ತುಂಬಾ ಇಷ್ಟಪಡುತ್ತಿದ್ದಾರೆ.

Advertisement

ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ರಂಜಿತ್, “ಯಶಸ್ಸನ್ನು ಪಡೆಯಲು ಸಂಘರ್ಷ ಮಾಡುತ್ತಿರುವ ಯುವಕರಿಗೆ ನನ್ನ ಜೀವನ ಸ್ಫೂರ್ತಿಯಾಗಬೇಕೆಂದು ನಾನು ಬಯಸುತ್ತೇನೆ. ನನ್ನ 12 ನೆಯ ತರಗತಿಯ ವಿದ್ಯಾಭ್ಯಾಸ ಮುಗಿಸಿದ ನಂತರ ನನ್ನ ಹೆಚ್ಚಿನ ಅಧ್ಯಯನವನ್ನು ತೊರೆದು ಸಣ್ಣ ಕೆಲಸ ಮಾಡುವ ಮೂಲಕ ಕುಟುಂಬಕ್ಕೆ ಸಹಾಯ ಮಾಡುವ ಬಗ್ಗೆ ಯೋಚಿಸಿದೆ” ಎಂದು ಹೇಳುತ್ತಾರೆ. 28 ವರ್ಷದ ರಾಮಚಂದ್ರನ್ ಈ ಹಿಂದೆ ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು.

ಕುಟುಂಬಕ್ಕಾಗಿ ನೈಟ್ ಗಾರ್ಡ್ ಕೆಲಸ

ರಂಜಿತ್ ರಾಮಚಂದ್ರನ್ ತಮ್ಮ ಗುರಿ ತಲುಪಲು ಸುದೀರ್ಘ ಮತ್ತು ಸಂಘರ್ಷದಿಂದ ಕೂಡಿದ ಪ್ರಯಾಣವನ್ನು ಮಾಡಿದ್ದಾರೆ. ಅವರು ಇಂದು ಹೆಚ್ಚು ಚರ್ಚೆಯಲ್ಲಿರಲು ಇದೂ ಒಂದು ಕಾರಣವಾಗಿದೆ. ವರದಿಗಳ ಪ್ರಕಾರ, ರಂಜಿತ್ ತನ್ನ ಕುಟುಂಬವನ್ನು ನಿರ್ವಹಿಸಲು ನೈಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸಮಯವೂ ಇತ್ತು. ಅವರು ಬೆಳಿಗ್ಗೆ ಕಾಲೇಜಿಗೆ ಹೋಗುತ್ತಿದ್ದರು ಮತ್ತು ರಾತ್ರಿಯಲ್ಲಿ ಟೆಲಿಫೋನ್ ಎಕ್ಸ್‌ಚೇಂಜ್ ಸೆಂಟರ್ ನಲ್ಲಿ ನೈಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಅಲ್ಲಿ 5 ವರ್ಷ ಕೆಲಸ ಮಾಡಿದರು ಎಂದು ಹೇಳಿದರು.

ಕಾಸರಗೋಡಿನಲ್ಲಿ ಕಾಲೇಜಿನ ದಿನಗಳನ್ನ ನೆನಪಿಸಿಕೊಳ್ಳುತ್ತ ಮಾತನಾಡಿದ ರಂಜಿತ್

“12 ನೆಯ ತರಗತಿಯ ನಂತರ, ನನ್ನ ಹೆತ್ತವರಿಗೆ ಆರ್ಥಿಕವಾಗಿ ಸಹಾಯ ಮಾಡಲು ನಾನು ಕೆಲಸ ಮಾಡಲು ನಿರ್ಧರಿಸಿದೆ. ಸ್ಥಳೀಯ ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌ಚೇಂಜ್ ಸೆಂಟರ್ ನಲ್ಲಿ ನನಗೆ ನೈಟ್ ಗಾರ್ಡ್ ಕೆಲಸ ಸಿಕ್ಕಿತು. ಇದಕ್ಕಾಗಿ ನಾನು ತಿಂಗಳಿಗೆ 4,000 ರೂಪಾಯಿಗಳನ್ನು ಪಡೆಯುತ್ತಿದ್ದೆ. ಅದರಲ್ಲಿ ಕೆಲವು ಹಣವನ್ನು ನನ್ನ ಕಿರಿಯ ಸಹೋದರ ಮತ್ತು ಸಹೋದರಿಯ ಶಿಕ್ಷಣಕ್ಕಾಗಿ ಖರ್ಚು ಮಾಡಲಾಯಿತು” ಎನ್ನುತ್ತಾರೆ.

ಒಂದು ವರ್ಷದ ಹಿಂದೆಯಷ್ಟೇ ಎಕನಾಮಿಕ್ಸ್ ನಲ್ಲಿ ಪಿಎಚ್‌ಡಿ

ರಂಜಿತ್ ಒಂದು ವರ್ಷದ ಹಿಂದೆಯಷ್ಟೇ ಎಕನಾಮಿಕ್ಸ್ ನಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಆದರೆ ಆರ್ಥಿಕ ಸಮಸ್ಯೆಯ ಕಾರಣ, ಅವರು ಅದನ್ನು ಬಿಡಲು ಬಯಸಿದ್ದರು. ಅವರು “ಐಐಟಿ ಮದ್ರಾಸ್‌ಗೆ ಸೇರಿದಾಗ ನನಗೆ ಇಂಗ್ಲಿಷ್ ಮಾತನಾಡಲು ಕೂಡ ಬರುತ್ತಿರಲಿಲ್ಲ. ಆದರೆ ಆ ಸಮಯದಲ್ಲಿ, ಮಾರ್ಗದರ್ಶಕ ಪ್ರೊಫೆಸರ್ ಸುಭಾಷ್ ನನಗೆ ಸಾಕಷ್ಟು ಸಹಾಯ ಮಾಡಿದರು” ಎಂದರು.

ಅರ್ಧದಲ್ಲೇ ಪಿಎಚ್‌ಡಿ ಬಿಡುವುದು ತಪ್ಪು ಎಂದು ಪ್ರೊಫೆಸರ್ ಸುಭಾಷ್ ರಂಜಿತ್‌ಗೆ ವಿವರಿಸಿದರು. ನಂತರ ರಂಜಿತ್ ಐಐಎಂನಲ್ಲಿ ಪ್ರೊಫೆಸರ್ ಆಗಬೇಕೆಂಬ ಕನಸು ಕಂಡಿದ್ದಷ್ಟೇ ಅಲ್ಲದೆ ಅದನ್ನ ನನಸಾಗಿಸಲು ಕಷ್ಟಪಟ್ಟರು. ರಂಜಿತ್ ತನ್ನ ಹಣವನ್ನು ಐಐಟಿ ಮದ್ರಾಸ್‌ನಲ್ಲಿ ಸಿಗುತ್ತಿದ್ದ ಸ್ಟೈಫಂಡ್ ಹಣದಿಂದ ತಮ್ಮ ಖರ್ಚು ನಿರ್ವಹಣೆ ಮಾಡುತ್ತಿದ್ದರು, ಆದರೆ ಅದರ ಒಂದು ಭಾಗವನ್ನು ತನ್ನ ಒಡಹುಟ್ಟಿದವರ ಶಿಕ್ಷಣಕ್ಕಾಗೂ ಖರ್ಚು ಮಾಡುತ್ತಿದ್ದರು.

ಕೆರಿಯರ್ ನಲ್ಲಿ ರಿಸರ್ವೇಷನ್ ಅಗತ್ಯವಿಲ್ಲ

ರಂಜೀತ್ ರಾಮಚಂದ್ರನ್ ಅವರ ತಂದೆ ರವೀಂದ್ರನ್ ವೃತ್ತಿಯಲ್ಲಿ ಟೇಲರ್ ಆಗಿದ್ದಾರೆ ಹಾಗು ಅವರ ತಾಯಿ ಮನರೇಗಾ ನಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ. ತಂದೆ ತಾಯಿಯ ಮೂವರು ಮಕ್ಕಳಲ್ಲಿ ರಂಜಿತ್ ಹಿರಿಯರು. ಅವರ ಇಡೀ ಕುಟುಂಬವು ಒಂದು ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತದೆ, ಮನೆಯ ಛಾವಣಿ ಪಾಲಿಥೀನ್ ನದ್ದಾಗಿದ್ದು ಮಳೆ ಬಂದಾಗ ಮನೆ ಸೋರುತ್ತದೆ. ರಂಜಿತ್ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುವ ಮರಾಠಿ ಮಾತನಾಡುವ ಹಿಂದುಳಿದ ಬುಡಕಟ್ಟು ಸಮುದಾಯದವರು, ಆದರೆ ರಂಜಿತ್ ಅವರು ತಮ್ಮ ವೃತ್ತಿಜೀವನದಲ್ಲಿ ಮೀಸಲಾತಿ ಅಗತ್ಯವಿಲ್ಲ ಎಂದು ಹೇಳುತ್ತಾರೆ.

ಕೇರಳ ಸರ್ಕಾರವನ್ನ ಪ್ರಶ್ನಿಸಲಾರಂಭಿಸಿದ ಜನ

ಫೇಸ್‌ಬುಕ್‌ನಲ್ಲಿ ರಂಜಿತ್ ಅವರ ಪೋಸ್ಟ್ ವೈರಲ್ ಆದ ನಂತರ, ಅನೇಕ ಜನರು ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವರ ಸಂಘರ್ಷದ ಕಥೆ ವೈರಲ್ ಆದ ನಂತರ ಸಾಮಾಜಿಕ ಕಾರ್ಯಕರ್ತ ಸಂತೋಷ್ ಕುಮಾರ್ ಕೇರಳ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸ್ವಜನಪಕ್ಷಪಾತದ ಮಧ್ಯೆ ರಂಜಿತ್ ನೇಮಕದ ಬಗ್ಗೆ ಸರ್ಕಾರ ಕಣ್ಣುಮುಚ್ಚಿ ಕೂತಿದೆ ಎಂದರು. ರಂಜಿತ್ ಅವರನ್ನು ಕ್ಯಾಲಿಕಟ್ ವಿಶ್ವವಿದ್ಯಾಲಯಕ್ಕೆ ಏಕೆ ನೇಮಕ ಮಾಡಿಲ್ಲ ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಅವರು ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕ ಹುದ್ದೆಗೆ ನಾಲ್ಕನೇ ಸ್ಥಾನವನ್ನು ಪಡೆದಿದ್ದರು.

Advertisement
Share this on...