Mothers day: ತಮ್ಮ ತಾಯಿಗಾಗಿ ಸುರುಪುರ ಶಾಸಕ ರಾಜು ಗೌಡ ಮಾಡಿದ ಈ ಕೆಲಸ ನೋಡಿದರೆ ನಿಮ್ಮ‌ ಕಣ್ಣಲ್ಲೂ ನೀರು ಬರುತ್ತೆ.! ಮಕ್ಕಳಿದ್ದರೆ ಹೀಗಿರಬೇಕು ನೋಡಿ

in Kannada News/News/Story 211 views

ಯಾದಗಿರಿ: ತಾಯಿ ಭೂಮಿ ಮೇಲಿರುವ ಏಕೈಕ ನಡೆದಾಡುವ ದೈವ. ಜಗತ್ತಿನಲ್ಲಿ ತಾಯಿ ಪ್ರೀತಿ ಮತ್ತು ತ್ಯಾಗಕ್ಕೆ ಯಾರು ಕೂಡ ಸರಿಸಮಾನರಲ್ಲ. ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ತಾಯಿಯ ಮುಂದೆ ಅವರು ಮಕ್ಕಳೇ. ರಾಜಕೀಯದವರು ಕುಟುಂಬಕ್ಕೆ ಸಮಯ ಕೊಡುವುದಿಲ್ಲ ಎಂಬ ಮಾತಿದೆ. ಅಲ್ಲದೇ ಎಷ್ಟೋ ರಾಜಕಾರಣಿಗಳು ಅವರ ತಂದೆ-ತಾಯಿಯರನ್ನು ವಯಸ್ಸಾದ ಬಳಿಕ ಕೈಬಿಟ್ಟ ಪ್ರಕರಣ ನಮ್ಮ ಕಣ್ಣ ಮುಂದಿವೆ. ಇವುಗಳ  ಮಧ್ಯೆ ಯಾದಗಿರಿ ಸುರಪುರದ ಶಾಸಕ ರಾಜೂಗೌಡ ಮಾತ್ರ ವಿಭಿನ್ನವಾಗಿದ್ದಾರೆ. ಅವರ ತಾಯಿ ಬದುಕಿದ್ದಾಗ ಎಷ್ಟು ಪ್ರೀತಿ ಮಾಡಿದ್ದಾರೋ ಅವರು ಮೃತರಾದ ಮೇಲೂ ಅದಕ್ಕಿಂತ ಜಾಸ್ತಿ ಪ್ರೀತಿ ಮಾಡುತ್ತಿದ್ದಾರೆ. ಅವರ ತಾಯಿ ಜೊತೆಗೆ ಇರದಿದ್ದರೂ ಅವರ ನೆರಳಿನಲ್ಲಿ ಜೀವನ ಕಳೆಯುತ್ತಿದ್ದಾರೆ.

Advertisement

ರಾಜೂಗೌಡರು ತಮ್ಮ ತಾಯಿ ತಿಮ್ಮಮ್ಮನವರ ನೆನಪಿಗಾಗಿ ಸ್ವಗ್ರಾಮ ಕೊಡೆಕಲ್ ಜಮೀನಿನಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಇಷ್ಟೇ ಅಲ್ಲದೇ ಅವರ ತಾಯಿ ಬಹಳಷ್ಟು ಪ್ರೀತಿಯಿಂದ ಸಾಕಿದ್ದ ಗೋವುಗಳಿಗಾಗಿ ಗೋಶಾಲೆ, ಕುರಿ ಸಾಗಾಣಿಕೆ ಜೊತೆಗೆ ನೈಸರ್ಗಿಕ ಕೃಷಿಗೆ ಸಹ ಮುಂದಾಗಿದ್ದಾರೆ. ಅವರ ತಾಯಿ ನಡೆದಾಡುವ ಸ್ಥಳ ಇಂದು ಶಾಂತಿಧಾಮವಾಗಿದೆ. ಅಷ್ಟೇ ಅಲ್ಲದೇ ಅವರ ತಾಯಿ ಸಮಾಧಿ ಬಳಿಯೇ ಮನೆ ನಿರ್ಮಾಣ ಮಾಡಿಕೊಂಡಿರುವ ರಾಜೂಗೌಡರು ಸದ್ಯ ಅಲ್ಲಿಯೇ ವಾಸವಾಗಿದ್ದಾರೆ.

ರಾಜೂಗೌಡರು ಶಾಸಕರಾಗಲು ಅವರ ತಾಯಿ ತಿಮ್ಮಮ್ಮ ಮತ್ತು ಅವರ ತಂದೆ ಶಂಭುನಗೌಡರ ಶ್ರಮ ಬಹಳಷ್ಟಿದೆ. ರಾಜೂಗೌಡರು ಸುರಪುರಕ್ಕೆ ಮಾತ್ರ ಶಾಸಕರು. ಆದ್ರೆ ಸುರಪುರ ಕ್ಷೇತ್ರದ ಜನತೆಗೆ ತಿಮ್ಮಮ್ಮನವರೇ ಶಾಸಕಿ. ಕ್ಷೇತ್ರದ ಬಡವರ ಕಷ್ಟಕ್ಕೆ ತಿಮ್ಮಮ್ಮನವರು ಆಸರೆಯಾಗಿದ್ದರು. ಕಷ್ಟ ಹೇಳಿಕೊಂಡು ಮನೆಗೆ ಯಾರೇ ಬಂದರೂ ಅವರೇ ತಮ್ಮ ಕೈಯಾರೇ ಊಟ ಬಡಿಸಿ ಅವರ ಕಷ್ಟ ಆಲಿಸಿ ಅವರಿಗೆ ಸಹಾಯ ಮಾಡುತ್ತಿದ್ದರು. ಅಲ್ಲದೆ ಶಾಸಕ ರಾಜೂಗೌಡ ಮತ್ತು ಅವರ ಸಹೋದರ ಬಬ್ಲುಗೌಡ ದೊಡ್ಡವರಾಗಿ ಬೆಳೆದಿದ್ದರೂ ಪ್ರತಿ ದಿನ ಅವರ ತಾಯಿಯ ಕೈ ತುತ್ತು ತಿನ್ನುತ್ತಿದ್ದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೂಗೌಡರ ತಾಯಿ ಕಳೆದ ವರ್ಷ ನಿಧನರಾಗಿದ್ದಾರೆ. ತಾಯಿ ಅಗಲಿಕೆ ರಾಜೂಗೌಡರಿಗೆ ಅತೀವ ನೋವು ನೀಡಿತು. ಅಲ್ಲದೆ ತಾಯಿ ಮಡಿಲು ಅವರಿಗೆ ಬೇಕೆನ್ನಿಸಿತು. ಹೀಗಾಗಿ ರಾಜಸ್ಥಾನದಿಂದ ವಿಶೇಷ ಕಲ್ಲುಗಳನ್ನು ತಂದು ಆಂಧ್ರದ ಶಿಲ್ಪಿಗಳಿಂದ ತಾಯಿಯ ಮೂರ್ತಿಯನ್ನು ತಯಾರಿಸಿ ದೇವಸ್ಥಾನ ನಿರ್ಮಿಸಿದ್ದಾರೆ.

ರಾಜೂಗೌಡರು ಅವರ ತಾಯಿ ಮೂರ್ತಿಯನ್ನು ಅವರೇ ಸ್ವಚ್ಛಗೊಳಿಸಿ ಪೂಜೆ ಮಾಡಿ ನಮಸ್ಕರಿಸಿ ಬಳಿಕವೇ ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಾರೆ. ಅವರ ಸಮಾಧಿ ಸ್ಥಳಕ್ಕೆ ಬಹಳಷ್ಟು ಆಭಾರಿಯಾಗಿರುವ ರಾಜೂಗೌಡ ಎಲ್ಲಿಯೇ ಇದ್ದರೂ ರಾತ್ರಿ ಎಷ್ಟೋ ಹೊತ್ತು ಆದರೂ ವಾಪಸ್ ಇಲ್ಲಿಗೆ ಬಂದು ಬಿಡುತ್ತಾರೆ. ಅಲ್ಲದೇ ತಮ್ಮ ತಾಯಿಯ ಮುಖಚಿತ್ರವನ್ನು ಕೈಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅಪ್ಪನ ಈ ಪ್ರೀತಿ ರಾಜೂಗೌಡರ ಮಗ ಮಣಿಕಠಗೌಡ ಮಾರುಹೋಗಿದ್ದಾರೆ. ಅವರ ಅಜ್ಜಿಯ ನೆನಪುಗಳಿರುವ ಈ ಜಮೀನಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ.

ತಂದೆ-ತಾಯಿ ದುಡ್ಡಿನಲ್ಲಿ ಶೋಕಿ ಮಾಡಿ, ಮುಪ್ಪಿನ ಕಾಲದಲ್ಲಿ ಮನೆಯಿಂದ ಹೊರಗೆ ಹಾಕಿ, ಇಳಿ ವಯಸ್ಸಿನ ಜೀವನವನ್ನು ನರಕ ಮಾಡುವ ಮಕ್ಕಳ ಮಧ್ಯೆ ಶಾಸಕರಾಗಿದ್ದರೂ ಮೃತರಾದ ತಾಯಿಗೆ ಪ್ರೀತಿ ತೋರಿಸುತ್ತಿರುವ ರಾಜೂಗೌಡ ಮತ್ತು ಅವರ ಸಹೋದರರ ಈ ತಾಯಿ ಪ್ರೀತಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮಾಹಿತಿ ಕೃಪೆ: ಪಬ್ಲಿಕ್ ಟಿವಿ

Advertisement
Share this on...