ಐದೂವರೆ ಲಕ್ಷ ರೂ. ಕಟ್ಟಿ ರೋಗಿಯನ್ನು ಕರೆದುಕೊಂಡು ಹೋಗಿ ಎಂದ ಆಸ್ಪತ್ರೆ; ಹಣವಿಲ್ಲ ಅಂತ ಹೇಳಿದ ಕುಟುಂಬಸ್ಥರು ಮಾಡಿದ್ದೇನು ಗೊತ್ತೇ?

in Kannada News/News 147 views

ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಕೊರೊನಾ ಉಂಟುಮಾಡಿರುವ ಸಮಸ್ಯೆಗಳು ಒಂದೆರಡಲ್ಲ. ಕೊವಿಡ್​ 19ನಿಂದಾಗಿ ಜನರ ಆರೋಗ್ಯದಲ್ಲಿ ಎಷ್ಟೆಲ್ಲಾ ಏರುಪೇರಾಗಿದೆಯೋ ಅಂಥದ್ದೇ ಬದಲಾವಣೆಗಳು ಅವರ ಮಾನಸಿಕ, ಆರ್ಥಿಕ ಸ್ಥಿತಿಯಲ್ಲೂ ಆಗಿದೆ. ಬಡವರಿಗೆ ಕೊರೊನಾ ತಗುಲಿದರಂತೂ ಆರೋಗ್ಯ ಸುಧಾರಿಸಿದರೂ ನಂತರ ಆರ್ಥಿಕ ಮುಗ್ಗಟ್ಟು ಕಟ್ಟಿಟ್ಟ ಬುತ್ತಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ವಿರುದ್ಧವೂ ಸಾಕಷ್ಟು ಅಪಸ್ವರಗಳು ಕೇಳಿಬರುತ್ತಿದ್ದು, ಇದೀಗ ಬೆಂಗಳೂರಿನ ಯಶವಂತಪುರದ ಆಸ್ಪತ್ರೆಯೊಂದರ ವಿರುದ್ಧ ಸೋಂಕಿತರ ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ. ಅಲ್ಲದೇ, ಹಣ ಕಟ್ಟುವುದು ಸಾಧ್ಯವಿಲ್ಲವೆಂದು ರೋಗಿಯನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ದೊಡ್ಡಬಳ್ಳಾಪುರದ ನಿವಾಸಿಯಾದ ಭಾಗ್ಯಮ್ಮ (55 ವರ್ಷ) ಎಂಬುವವರಿಗೆ ಮೇ ತಿಂಗಳ ಅಂತ್ಯದಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗಾಗಿ ಮೇ 30ರಂದು ಅವರನ್ನು ಯಶವಂತಪುರದ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಮಾರು ಮೂರು ವಾರಗಳ ಕಾಲ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆಯಂತೆ. ಅಲ್ಲದೇ, ಚಿಕಿತ್ಸೆಯ ನಂತರ ಭಾಗಮ್ಯ ಅವರ ಆರೋಗ್ಯದಲ್ಲಿ ಚೇತರಿಕೆಯೂ ಕಂಡುಬಂದಿದೆ.

ಇದೀಗ ಭಾಗ್ಯಮ್ಮ ಅವರ ಕೊರೊನಾ ಟೆಸ್ಟ್ ರಿಪೋರ್ಟ್​ನಲ್ಲಿ ನೆಗೆಟಿವ್​ ಕಾಣಿಸಿಕೊಂಡಿದ್ದು, ಅವರನ್ನು ಜನರಲ್​ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಆದ್ದರಿಂದ, ಚಿಕಿತ್ಸೆಗೆ ಖರ್ಚಾದ ಹಣ ಪಾವತಿಸಿ ರೋಗಿಯನ್ನು ಕರೆದುಕೊಂಡು ಹೋಗಿ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಆದರೆ, ಕಟ್ಟಬೇಕಾದ ಮೊತ್ತ ಎಷ್ಟು ಎಂದು ತಿಳಿದ ನಂತರ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಕುಟುಂಬದವರು ಹೇಳುವ ಪ್ರಕಾರ, ಸ್ಪರ್ಶ ಆಸ್ಪತ್ರೆಯವರು ಚಿಕಿತ್ಸೆಯ ವೆಚ್ಚವೆಂದು ಒಟ್ಟು 13 ಲಕ್ಷ ರೂಪಾಯಿ ಬಿಲ್​ ಹಾಕಿದ್ದಾರಂತೆ. ಅಷ್ಟನ್ನೂ ಕಟ್ಟಿ ರೋಗಿಯನ್ನು ಡಿಸ್ಚಾರ್ಜ್​ ಮಾಡಿಕೊಳ್ಳಿ ಎಂದಿದ್ದಾರಂತೆ.

ಬಿಲ್​ ನೋಡಿ ಗಾಬರಿಯಾದ ಮನೆ ಮಂದಿ, 13 ಲಕ್ಷ ರೂಪಾಯಿ ಪೈಕಿ 7.5ಲಕ್ಷ ರೂಪಾಯಿ ಕಟ್ಟಿದ್ದಾರಂತೆ. ಇನ್ನು ನಮ್ಮ ಬಳಿ ಕಟ್ಟಲು ಹಣವೇ ಇಲ್ಲ. ದಯವಿಟ್ಟು ಇಷ್ಟು ಕಟ್ಟಿಸಿಕೊಂಡು ಡಿಸ್ಚಾರ್ಜ್​ ಮಾಡಿ ಎಂದು ಗೋಗರೆದಿದ್ದಾರೆ. ಆದರೆ, ಆಸ್ಪತ್ರೆಯವರು ಮಾತ್ರ ಇನ್ನುಳಿದ ಐದೂವರೆ ಲಕ್ಷ ರೂಪಾಯಿ ಪಾವತಿಸದೇ ಡಿಸ್ಚಾರ್ಜ್​ ಮಾಡುವುದು ಸಾಧ್ಯವೇ ಇಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಈಗ ಆಸ್ಪತ್ರೆಯವರು ಮಿಕ್ಕ ಹಣ ಕೊಡದಿದ್ದರೆ ರೋಗಿಯನ್ನು ಡಿಸ್ಚಾರ್ಜ್​ ಮಾಡುವುದಿಲ್ಲವೆಂದೂ, ಇತ್ತ ರೋಗಿಕಡೆಯವರು ಹಣ ಕಟ್ಟಲು ನಮ್ಮ ಬಳಿ ಏನೂ ಉಳಿದಿಲ್ಲವೆಂದೂ ಹೇಳುತ್ತಿರುವ ಕಾರಣ ಭಾಗ್ಯಮ್ಮ ಅವರ ಸ್ಥಿತಿ ಅತಂತ್ರವಾಗಿದೆ. ಇತ್ತ ಕುಟುಂಬಸ್ಥರು ನಾವು ಎಷ್ಟೇ ಮನವಿ ಮಾಡಿಕೊಂಡರೂ ಆಸ್ಪತ್ರೆಯವರು ಮಾನವೀಯತೆ ತೋರುತ್ತಿಲ್ಲ. ಅವರ ಧನದಾಹ ನೀಗಿಸುವುದು ನಮ್ಮಿಂದ ಸಾಧ್ಯವಿಲ್ಲ ಎಂದು ಆರೋಪ ಮಾಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಆಸ್ಪತ್ರೆಯವರ ಬಿಗಿಪಟ್ಟಿನಿಂದ ಬೇಸತ್ತ ಭಾಗ್ಯಮ್ಮನ ಮಕ್ಕಳು ಅಮ್ಮನನ್ನು ನೀವೇ ಇಟ್ಟುಕೊಳ್ಳಿ ಎಂದು ಹೇಳಿ ವಾಪಸ್ ಹೋಗಿದ್ದಾರಂತೆ.

Advertisement
Share this on...