‘ಈ’ ದಿನದಂದು ಬಿಜೆಪಿ ಪಕ್ಷ ತೊರೆಯಲು‌‌ ಮುಹೂರ್ತ ಫಿಕ್ಸ್ ಮಾಡಿದ ಸಿಪಿ ಯೋಗೇಶ್ವರ್? ಯಾವ ದಿನ ನೋಡಿ

in Kannada News/News 681 views

ರಾಮನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸುವಲ್ಲಿ ವಿಫಲ ಆಗಿರುವ ಚನ್ನಪಟ್ಟಣದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಮರಳಿ ಯತ್ನ ಮಾಡುತ್ತಿದ್ದು, ಆಷಾಢದ ನಂತರ ಶುಭ ಸುದ್ದಿ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಎರಡನೇ ಬಾರಿಯೂ ‘ಫಲ’ ಸಿಗದೇ ಹೋದರೆ ಅವರ ನಡೆ ಏನು ಎಂಬುದೇ ಕುತೂಹಲ ಕೆರಳಿಸಿದೆ.

ಸಮ್ಮಿಶ್ರ ಸರ್ಕಾರ ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ಸ್ವತಃ ಹೇಳಿಕೊಂಡಿದ್ದ ಯೋಗೇಶ್ವರ್‌, ನಂತರ ತಮ್ಮದೇ ಪಕ್ಷದವರಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧವೂ ಹೈಕಮಾಂಡ್ ಎದುರು ‘ಪರೀಕ್ಷೆ’ ಬರೆದಿದ್ದರು. ಆದರೆ ಅದರಲ್ಲಿ ಪಾಸ್‌ ಆದರೂ ಸಚಿವ ಸ್ಥಾನ ಪಡೆಯುವಲ್ಲಿ ವಿಫಲ ಆಗಿದ್ದರು. ಮೂರ್ನಾಲ್ಕು ದಿನ ದೆಹಲಿಯಲ್ಲೇ ಠಿಕಾಣಿ ಹೂಡಿ ಪಕ್ಷದ ವರಿಷ್ಠರ ಗಮನ ಸೆಳೆಯಲು ಪ್ರಯತ್ನ ನಡೆಸಿದ್ದರು. ಆದರೆ ಆ ಪ್ರಯತ್ನ ಮಾತ್ರ ಫಲ ನೀಡಿಲ್ಲ.

ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವರಾಗಿಯೂ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದ್ದು ಸಿಪಿವೈಗೆ ಮುಳುವಾಗಿದೆ. ಇದೇ ಕಾರಣಕ್ಕೆ ಹೈಕಮಾಂಡ್ ಕೂಡ ಅವರಿಗೆ ಸದ್ಯಕ್ಕೆ ಸಚಿವ ಸ್ಥಾನ ನೀಡಲು ಒಪ್ಪಿಲ್ಲ. ಆದರೆ ಛಲ ಬಿಡದ

ಯೋಗೇಶ್ವರ್‌ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಾದರೂ ಅವಕಾಶ ಗಿಟ್ಟಿಸುವ ಪ್ರಯತ್ನ ಮುಂದುವರಿಸಿದ್ದಾರೆ.

ನಿರೀಕ್ಷೆ ಏನು?: ಸಚಿವ ಸ್ಥಾನ ಕೈ ತಪ್ಪಿದ ನಂತರ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಯೋಗೇಶ್ವರ್‌ ‘ಆಷಾಡದ ನಂತರ ಶುಭ ಸುದ್ದಿ ಬರಲಿದೆ. ಹುಟ್ಟುಹಬ್ಬದ ಒಳಗೆ (ಆ.29) ಸಚಿವನಾಗುತ್ತೇನೆ’ ಎಂದು ಕಾರ್ಯಕರ್ತರಲ್ಲಿ ಹೇಳಿಕೊಂಡಿದ್ದಾರೆ.

ಈ ಬಾರಿಯ ಸಂಪುಟದಲ್ಲಿ ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ದೊರೆತಿಲ್ಲ. ಹೀಗಾಗಿ ಮುಂದಿನ ಸಂಪುಟ ವಿಸ್ತರಣೆ ವೇಳೆ ಅವಕಾಶ ಸಿಗಲಿದೆ. ಹೈಕಮಾಂಡ್‌ ಕೂಡ ಇದೇ ಭರವಸೆ ನೀಡಿದೆ ಎಂದು ಯೋಗೇಶ್ವರ್‌ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಹಾಗೊಂದು ವೇಳೆ ಅವಕಾಶ ಸಿಕ್ಕಲ್ಲಿ ಪ್ರಬಲ ಖಾತೆಗೆ ಸಹ ಬೇಡಿಕೆ ಇಡಲಿದ್ದಾರೆ.

ಈ ಕುರಿತು ಪ್ರತಿಕ್ರಿಯೆಗೆ ಯೋಗೇಶ್ವರ್ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಪಕ್ಷೇತರರಾಗಿ ಸ್ಪರ್ಧಿಸುತ್ತಾರ?

ಯೋಗೇಶ್ವರ್‌ಗೆ ಒಂದು ವೇಳೆ ಬಿಜೆಪಿಯಲ್ಲಿ ಸಚಿವ ಸ್ಥಾನ ದೊರೆಯದೇ ಹೋದಲ್ಲಿ ಅಲ್ಲಿಂದ ಹೊರ ಬಂದು ಮುಂದಿನ ವಿಧಾನಸಭೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಚನ್ನಪಟ್ಟಣದಲ್ಲಿ ಪಕ್ಷೇತರನಾಗಿ ನಿಂತು ಗೆಲ್ಲುವ ಮೂಲಕವೇ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಯೋಗೇಶ್ವರ್‌ ನಂತರದಲ್ಲಿ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷಗಳನ್ನು ಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡು ನಂತರದಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಮುಂದುವರಿದಿದ್ದಾರೆ.

ಸಿಪಿವೈ ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿದರೂ ಪಕ್ಷ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನುಮತಿ ಬೇಕೇ ಬೇಕು. ಸದ್ಯ ಜಿಲ್ಲೆಯಲ್ಲಿ ಈ ಇಬ್ಬರೂ ರಾಜಕೀಯ ಬದ್ಧ ವೈರಿಗಳಾಂತಾಗಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆಶಿ, ಎಚ್‌ಡಿಕೆ ಅವರನ್ನು ಹಣಿಯಲು ಯೋಗೇಶ್ವರ್‌ರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲೂ ಮುಂದಾಗಬಹುದು. ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯ ಎನ್ನುತ್ತಾರೆ ಜಿಲ್ಲೆಯ ರಾಜಕೀಯ ಮುಖಂಡರು.

ಮಂತ್ರಿಗಿರಿ ಸಿಗದ ವಲಸೆ ಶಾಸಕರ ಕಥೆಯೇನು?

ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರ ನೇತೃತ್ವವನ್ನು ಮತ್ತೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಹಿಸಿಕೊಂಡಿದ್ದಾರೆ.

ವಲಸಿಗ ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ್‌ಕುಮಠಳ್ಳಿ, ವಿಧಾನ ಪರಿಷತ್‌ ಸದಸ್ಯರಾಜುಗೌಡ,ಅರವಿಂದ ಬೆಲ್ಲದ ಹಾಗೂ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್‌ ಅವರು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ನಿವಾಸದಲ್ಲಿ ಗುರುವಾರ ತಡ ರಾತ್ರಿ ಸಭೆ ನಡೆಸಿದ್ದಾರೆ. ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿರುವ ತಮ್ಮನ್ನು ಸಚಿವ ಸಂಪುಟದಿಂದ ಹೊರಗಿಟ್ಟು ತಮಗೆ ಅನ್ಯಾಯ ಮಾಡಲಾಗಿದೆ ಎಂದು ವಲಸೆ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಬಿಎಸ್‌ವೈ ಸಂಪುಟದಲ್ಲಿದ್ದ ಶ್ರೀಮಂತ ಪಾಟೀಲ್‌ ಹಾಗೂ ಆರ್‌. ಶಂಕರ್‌ಗೆ ಮತ್ತು ಮಹೇಶ್‌ ಕುಮಠಳ್ಳಿಗೆ ಸಚಿವ ಸ್ಥಾನ ನೀಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ.

ರಾಜೀನಾಮೆ ಇಂಗಿತ: ಬಿಜೆಪಿ ನಾಯಕರು ನಡು ನೀರಿನಲ್ಲಿಕೈ ಬಿಟ್ಟಿದ್ದು, ನೀವೇ ನ್ಯಾಯ ಕೊಡಿಸಿ ಎಂದು ಜಾರಕಿಹೊಳಿ ಅವರನ್ನು ಶ್ರೀಮಂತ ಪಾಟೀಲ್‌, ಕುಮಠಳ್ಳಿ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ ಅಲ್ಲದೇ, ಈಗ ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳಲ್ಲಿ ತಮಗೆ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆರ್‌. ಶಂಕರ್‌ ಕೂಡ ಬಿಜೆಪಿ ನಾಯಕರ ನಡೆಯ ಬಗ್ಗೆ ಬೇಸರಗೊಂಡಿದ್ದಾರೆ ಎನ್ನಲಾಗಿದ್ದು, ತಮ್ಮಿಂದ ಬಿಜೆಪಿಗೆ ಅಧಿಕಾರ ಬಂದಿದ್ದರೂ, ತಮ್ಮನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೇಇರುವುದು ಯಾವ ನ್ಯಾಯ? ಈ ಬಗ್ಗೆ ಬಿಜೆಪಿ ಹೈಕಮಾಂಡ್‌ ನಾಯಕರ ಜೊತೆ ಚರ್ಚಿಸುವಂತೆ ರಮೇಶ್‌ ಜಾರಕಿಹೊಳಿಗೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನ ಸಿಗದೇ ವಂಚಿತರಾಗಿರುವ ಮೂಲ ಬಿಜೆಪಿ ಶಾಸಕರಾಗಿರುವ ಅರವಿಂದ ಬೆಲ್ಲದ ಹಾಗೂ ರಾಜು ಗೌಡ ಸಭೆಯಲ್ಲಿ ಪಾಲ್ಗೊಂಡು ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆಗಳ ಕುರಿತು ಶುಕ್ರವಾರ ಮತ್ತೂಂದು ಸಭೆ ನಡೆಸಿ ಚರ್ಚಿಸಲು ಅತೃಪ್ತರು ನಿರ್ಧರಿಸಿದ್ದರು ಎನ್ನಲಾಗಿದ್ದು, ಆದರೆ, ಶುಕ್ರವಾರ ಯಾವುದೇ ರೀತಿಯ ಸಭೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಬೊಮ್ಮಾಯಿ ಆಹ್ವಾನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅತೃಪ್ತ ಶಾಸಕರು ಸಭೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆಗಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು ಚರ್ಚಿಸಿ ತೀರ್ಮಾನ ಮಾಡೋಣ ಎಂದು ಅತೃಪ್ತರಿಗೆ ‌ ಮಾತುಕತೆಗೆ ಆಹ್ವಾನ ನೀಡಿದ್ದರು ಎನ್ನಲಾಗಿದೆ. ಆದರೆ, ಮತ್ತೂಂದು ಬಾರಿ ಸಭೆ ಸೇರಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಅತೃಪ್ತರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅದೇಕಾರಣಕ್ಕೆ ಶುಕ್ರವಾರ ಸಿಎಂರನ್ನು ಭೇಟಿ ಮಾಡದೇ ಅಂತರ ಕಾಯ್ದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸ್ಥಾನದ ವಿಚಾರವಾಗಿ ಈಗಾಗಲೇ ಚರ್ಚೆ ನಡೆದಿದೆ. ಮುಂದಿನ ಜೂನ್‌ ತಿಂಗಳವರೆಗೂ ಎಂಎಲ್ ಸಿ ಖಾಲಿ ಇಲ್ಲ. ಹಾಗಾಗಿ ಈಗ ಸಚಿವ ಸ್ಥಾನವನ್ನೂ ಕೇಳಲು ಸಾಧ್ಯವಿಲ್ಲ. ನಮ್ಮ ತ್ಯಾಗಕ್ಕೆ ಈಗ ಯಾವುದೇ ಬೆಲೆ ಇಲ್ಲ. ನಾವೆಲ್ಲರೂ ಸ್ನೇಹಿತರು, ಹಾಗಾಗಿ ಬಂದು ಭೇಟಿಯಾಗಿದ್ದೇವೆ ಎಂದು ಪ್ರತಾಪಗೌಡ ಪಾಟೀಲ್ ಹೇಳಿದ್ದಾರೆ.

ಬಿಜೆಪಿ ತೊರೆಯಲು ಮುಂದಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್

 ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿನ ಅಸಮಾಧಾನ ಸ್ಪೋಟವಾಗುತ್ತಿದೆ. ಮಂತ್ರಿಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ವಿಧಾನಸಭಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸವದತ್ತಿ ಎಲ್ಲಮ್ಮ ಕ್ಷೇತ್ರದ ಶಾಸಕ ಆನಂದ್ ಮಾಮನಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಎರಡನೇ ಹಂತದ ಸಂಪುಟ ವಿಸ್ತರಣೆ ಮಾಡುವಾದ ಮಂತ್ರಿ ಸ್ಥಾನ ಕೊಡುವ ಭರವಸೆಯನ್ನು ಬಿಜೆಪಿ ನಾಯಕರು ಕೊಟ್ಟಿದ್ದಾರೆ. ಹೀಗಾಗಿ ರಾಜೀನಾಮೆ ನಿರ್ಧಾರದಿಂದ ಶಾಸಕ ಆನಂದ್ ಮಾಮನಿ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿಯಿದೆ. ಇದೀಗ ಮತ್ತೆ ಬೆಳಗಾವಿ ಜಿಲ್ಲೆಯಿಂದಲೇ ಅಸಮಾಧಾನ ಸ್ಫೋ ಟ ವಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಮಂತ್ರಿಯಾಗಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್‌ಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಸ್ಥಾನ ನಿರಾಕರಿಸಲಾಗಿದೆ.

ಇದು ಮರಾಠ ಸಮುದಾಯದ ಆ ಕ್ರೋ ಶ ಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಬೆಳಗಾವಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮರಾಠ ಮತಗಳು ನಿರ್ಣಾಯಕವಾಗಿವೆ. ಹೀಗಾಗಿ ಮರಾಠ ಸಮುದಾಯವನ್ನು ರಾಜಕೀಯ ಪಕ್ಷಗಳು ನಿರ್ಲಕ್ಷ ಮಾಡುವುದಿಲ್ಲ. ಇದೇ ಕಾರಣದಿಂದ ಬಸವ ಕಲ್ಯಾಣ ಚುನಾವಣೆ ಸಂದರ್ಭದಲ್ಲಿ ಮರಾಠ ಅಭಿವೃದ್ಧಿ ನಿಗಮ ಮಾಡುವ ಭರವಸೆಯನ್ನು ಆಗಿನ ಸಿಎಂ ಯಡಿಯೂರಪ್ಪ ಕೊಟ್ಟಿದ್ದರು.

ಆದರೂ ಕೂಡ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಮರಾಠ ಮತದಾರರು ಬಿಜೆಪಿಯಿಂದ ದೂರ ಸರಿಯುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ಮರಾಠ ಸಮುದಾಯದ ಬೆಂಬಲವಿರುವ ದಿ. ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರನ್ನು ಬಜೆಪಿ ಕಣಕ್ಕಿಳಿಸಿ ಪ್ರಯಾಸ ಗೆಲವು ಕಂಡಿತ್ತು. ಇದೀಗ ಮರಾಠ ಸಮುದಾಯ ಬಹಿರಂಗವಾಗಿ ಬಿಜೆಪಿ ನಾಯಕರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಬಿಜೆಪಿಗೆ ಎಚ್ಚರಿಕೆ ಗಂಟೆ ಎಂದು ಹೇಳಲಾಗುತ್ತಿದೆ.

ಮರಾಠ ಸಮುದಾಯದ ಅಸಮಾಧಾನ ಸ್ಫೋ ಟ!

ಮಾಜಿ ಸಚಿವ, ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಕ್ಷತ್ರಿಯ ಮರಾಠಾ ಸಂಘಟನೆಗಳ ಒಕ್ಕೂಟ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿದೆ.

‘ಮಾಜಿ ಸಚಿವ ಶ್ರೀಮಂತ ಪಾಟೀಲ್‌ಗೆ ಮತ್ತೆ ಸಚಿವ ಸ್ಥಾನ ಕೊಡಬೇಕು. ಬಿಜೆಪಿ ಸರ್ಕಾರ ಬಂದಾಗಲೇ ನಮ್ಮ ಸಮಾಜದ ಕಡೆಗಣನೆ ಆಗಿದೆ. ಯಡಿಯೂರಪ್ಪ ಬಂದಾಗ ಶ್ರೀಮಂತ ಪಾಟೀಲ್ ಸಚಿವರಾಗಿದ್ದರು. ಈ ಸರ್ಕಾರ ಬರೋದಕ್ಕೆ ಯಾರು ಕಾರಣರೋ ಅವರನ್ನೇ ಕೈ ಬಿಡಲಾಗಿದೆ. ಪಾರ್ಟಿಯನ್ನೇ ಬಿಟ್ಟು ಬಿಡೋಣ ಅನ್ನುವ ಮಟ್ಟಕ್ಕೆ ಶ್ರೀಮಂತ ಪಾಟೀಲ್ ಬೇಸರಗೊಂಡಿದ್ದಾರೆ. ಈಗಾಗಲೇ ನಮ್ಮ ಮರಾಠಾ ನಿಗಮ ಮಾಡಲಾಗಿದೆ. ಎಂಟು ತಿಂಗಳಾದರೂ ಮರಾಠ ನಿಗಮಕ್ಕೆ ಅಧ್ಯಕ್ಷರ ಆಯ್ಕೆ ಆಗಿಲ್ಲ, ಅನುದಾನ ಬಿಡುಗಡೆ ಮಾಡಿಲ್ಲ. ಇದನ್ನು ಸರ್ಕಾರ ಮಾಡದೇ ಹೋದರೆ ಸರ್ಕಾರದ ವಿರುದ್ಧ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿಯವರೆಗೆ ಮರಾಠಾ ಸಮಾಜ ಬೀದಿಗೆ ಬಂದಿಲ್ಲ. ಹೀಗೆ ಮುಂದುವರಿದರೆ ನಮ್ಮನ್ನು ಬಿಟ್ಟರೆ ಏನಾಗುತ್ತಾರೆ ಎಂಬುದನ್ನು ತೋರಿಸುತ್ತೇವೆ’ ಎಂದು ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ಅಧ್ಯಕ್ಷ ರಾಣೋಜಿರಾವ್ ಸಾಠೆ ಬೆಂಗಳೂರಿನಲ್ಲಿ ಮಾತನಾಡಿ ಎಚ್ಚರಿಕೆ ನೀಡಿದ್ದಾರೆ.

ಆ ಮಿ ಷ ಒಡ್ಡಿ ಬಿಜೆಪಿಗೆ ಕರೆ ತಂದಿದ್ದರು

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಸಿನಿಮಾ ಕಲಾವಿದ, ಮರಾಠ ಮುಖಂಡ ಗಣೇಶ್ ರಾವ್ ಅವರು, ‘2019 ರಲ್ಲಿ ಬಿಜೆಪಿ ರಚನೆ ಆಗುವಾಗ ಇಲ್ಲದ ಆಮಿಷ ಒಡ್ಡಿ ಶ್ರೀಮಂತ ಪಾಟೀಲ್‌ಗೆ ಒಲ್ಲದ ಖಾತೆ ಕೊಟ್ಟಿದ್ದರು. ಅವರಿಗೆ ಮನಸ್ಸಿಲ್ಲದಿದ್ದರೂ ಕೂಡ ಪಕ್ಷದ ಸಿದ್ದಾಂತ ಒಪ್ಪಿಕೊಂಡು ಖಾತೆಯನ್ನು ಕಪ್ಪು ಚುಕ್ಕೆ ಇಲ್ಲದಂತೆ ನಿರ್ವಹಣೆ ಮಾಡಿದ್ದಾರೆ. ಎರಡು ವರ್ಷದ ಅವಧಿಯಲ್ಲಿ ಒಂದು ಭ್ರ ಷ್ಟಾ ಚಾ ರ ಇಲ್ಲದೆ ಪಕ್ಷಕ್ಕೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಿಲ್ಲ. ಈ ಬಾರಿ ಕೂಡ ಮಂತ್ರಿ ಮಾಡುತ್ತೇವೆ ಅಂತ ಹಿಂದಿನ ದಿನದ ತನಕವೂ ಕೂಡ ಭರವಸೆ ಕೊಟ್ಟಿದ್ದರು. ಪಕ್ಷದ ಕಾರ್ಯಕರ್ತರಾಗಿ ಕ್ಷತ್ರಿಯ ಮರಾಠಾ ಸಮಾಜಕ್ಕೆ ಇದರಿಂದ ನೋವಾಗಿದೆ’ ಎಂದು ಗಂ ಭೀ ರ ಆ ರೋ ಪ ಮಾಡಿದ್ದಾರೆ.

‘ಬಿಜೆಪಿ ನಮ್ಮ ಸಮಾಜಕ್ಕೆ ಸರಿಯಾದ ಪ್ರಾತಿನಿಧ್ಯ ಕೊಟ್ಟಿಲ್ಲ. ಮರಾಠಾ ಜನಾಂಗ ತೀವ್ರ ಬೇಸರದಲ್ಲಿದೆ. ಬಸವ ಕಲ್ಯಾಣ ಚುನಾವಣೆಯಲ್ಲಿ ಎನ್‌ಸಿಪಿಯಿಂದ ಮರಾಠ ಸಮುದಾಯ ಪ್ರಭಾವಿ ಮುಖಂಡ ಮಾರುತಿರಾವ್ ಮೂಳೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆದರೂ ಬಸವ ಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಆಗುವುದಕ್ಕೆ ಮರಾಠ ಸಮಾಜವೇ ಕಾರಣ. ಬಿಜೆಪಿ ಸರ್ಕಾರಕ್ಕೆ ನಾವು ನಿಷ್ಟಾವಂತರಾದರೂ ಯಾಕೆ ಅನ್ಯಾಯ ಮಾಡಿ ಕಡೆಗಣಿಸಲಾಗುತ್ತದೆ? ಎಂದು ಗಣೇಶ್ ರಾವ್ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಬಿಡಲು ಮುಂದಾದ ಶ್ರೀಮಂತ ಪಾಟೀಲ್!

‘ಬಿಜೆಪಿ ಸರ್ಕಾರ ಬರಲು ಕಾರಣರಾಗಿದ್ದ ಶಾಸಕ ಶ್ರೀಮಂತ ಪಾಟೀಲ್ ಈಗ ಬಿಜೆಪಿಯನ್ನೇ ಬಿಡೋಕೆ ಹೊರಟಿದ್ದಾರೆ. ಆದರೆ ನಾವು ಶ್ರೀಮಂತ ಪಾಟೀಲಗೆ ಭರವಸೆ ಕೊಟ್ಟಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡುತ್ತೇವೆಂದು ಹೇಳಿದ್ದೇವೆ. ಹೀಗಾಗಿ ಮಾಧ್ಯಮಗಳ ಮುಂದೆ ಬಂದಿದ್ದೇವೆ. ಮರಾಠ ಅಭಿವೃದ್ಧಿ ನಿಗಮಕ್ಕೆ ನೇಮಕ ಮಾಡಬೇಕು. ಜೊತೆಗೆ ನಮ್ಮ ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ಕೊಡಲೇಬೇಕು. ನಿಗಮಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಸಮಿತಿ ರಚನೆ ಮಾಡಬೇಕು’ಎಂದು ರಾಣೋಜಿರಾವ್ ಸಾಟೆ ಆಗ್ರಹಿಸಿದ್ದಾರೆ.

ಇದೇ ಮಾತನ್ನು ಹೇಳಿರುವ ಮರಾಠ ಸಮುದಾಯದ ಪ್ರಭಾವಿ ನಾಯಕ ಗಣೇಶ್ ರಾವ್, ಬಿಜೆಪಿ ಪಕ್ಷಕ್ಕೆ ಕರೆದುಕೊಂಡು ಬಂದು ಈಗ ಶ್ರೀಮಂತ ಪಾಟೀಲ್‌ಗೆ ಅವಮಾನ ಮಾಡಿದೆ. ಶ್ರೀಮಂತ ಪಾಟಿಲ್ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಯೋಚನೆ ಮಾಡುತ್ತಿದ್ದಾರೆ. ನಮ್ಮ ಸಮಾಜ ಅವರ ಬೆನ್ನಿಗೆ ನಿಂತರೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಮಾಜದ ಅಭಿಪ್ರಾಯ ಪಡೆದು ರಾಜೀನಾಮೆ ಬೇಕಾದರೂ ಕೊಡುತ್ತೇನೆ ಅಂತಾ ಶ್ರೀಮಂತ ಪಾಟೀಲ್ ಹೇಳಿದ್ದಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಮನ್ನಿಸಲೇ ಬೇಕಿದೆ ಶ್ರೀಮಂತ ಪಾಟೀಲ್ ಬೇಡಿಕೆ

‘ಮರಾಠರು ಬಿಜೆಪಿಗೆ ಮತ ಹಾಕುತ್ತಾರೆ ಅಂದುಕೊಂಡಿದ್ದಾರೆ. ನಾವು ಬಿಜೆಪಿ ನಿಷ್ಟಾವಂತ ಕಾರ್ಯಕರ್ತರು. ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ಕೊಡುತ್ತಾರೆ. ಹೀಗಾಗಿ ಸರ್ಕಾರ ಮೊದಲು ಎಚ್ಚೆತ್ತುಕೊಳ್ಳಬೇಕು. ರಾಜ್ಯದ 12 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ‌ ಮತಗಳು ನಿರ್ಣಾಯಕ. ಒಟ್ಟು 40 ಲಕ್ಷದಷ್ಟಿರುವ ಮರಾಠ ಸಮುದಾಯಕ್ಕೆ ಅನ್ಯಾಯವಾಗಿದೆ. ಆದರೂ ನಾವು ಪಕ್ಷಕ್ಕೆ ಕಪ್ಪು ಚುಕ್ಕೆ ತರುವ ಪ್ರಯತ್ನ ಮಾಡುತ್ತಿಲ್ಲ. ನಾಯಕನಿಗೆ ಅನ್ಯಾಯವಾಗಿರೋದ್ರಿಂದ ಧ್ವನಿ ಎತ್ತಿದ್ದೇವೆ ಎಂದು ಮರಾಠ ಸಮುದಾಯದ ಮುಖಂಡ ಗಣೇಶ್ ಯಾಜಿ ಆಕ್ರೋಶ ವ್ಯಕ್ತಪಡಿಸಿದರು.

ಜೊತೆಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತರು. ಹೀಗಾಗಿ ಶಾಸಕ ಶ್ರೀಮಂತ ಪಾಟೀಲ್ ನಡೆಯ ಹಿಂದೆ ರಮೇಶ್ ಜಾರಕಿಹೊಳಿ ಅವರ ತಂತ್ರವಿರುತ್ತದೆ. ಆದರಿಂದ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಹೈಕಮಾಂಡ್ ಈ ವಿಚಾರನ್ನು ಗಂಭೀರವಾಗಿ ಪರಿಗಣಿಸುತ್ತದೆ ಎನ್ನಲಾಗಿದೆ.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ರಾಣೋಜಿರಾವ್ ಸಾಠೆ ಮತ್ತು ಕರ್ನಾಟಕ ಮರಾಠ ವೆಲ್ ಫೇರ್ ಅಸೋಸಸಸಿಯೇಷನ್ ಅಧ್ಯಕ್ಷ ಮನೋಜ್ ಕುಮಾರ್ ಹಾಗೂ ಮರಾಠ ಸಮುದಾಯದ ಮುಖಂಡರುಗಳಾದ ಗಣೇಶ್ ರಾವ್ ಕೇಸರ್ಕರ್, ಮಾರುತಿರಾವ್ ಮೋರೆ, ಕಮಲೇಶ್ ಪಡ್ತಾರೆ, ಪ್ರವೀಣ್ ಮಾನ್, ವೀರೂ ಫಿಶೆ, ಶೈಲೇಶ ನಾಜರೆ, ನಾಗೋಜಿರಾವ್ ಕರಾಡೆ, ಸತ್ಯನಾರಾಯಣ್ ಬಾಬಡೆ, ನಾಗರಾಜ್ ವನ್ಸ್, ತುಳಸಿರಾಮ್ ಒತ್ತಾಯಿಸಿದ್ದಾರೆ.

Advertisement
Share this on...